Friday 29 May 2020

🐚🐚ಮಾಂಡೂಕ್ಯೋಪನಿಷತ್ 💥💥

ಅಥರ್ವವೇದಕ್ಕೆ ಸೇರಿದ ಇದು ಅತ್ಯಂತ ಚಿಕ್ಕದಾಗಿದ್ದು ಕೇವಲ ಹನ್ನೆರಡು ಮಂತ್ರಗಳಿಂದ ಕೂಡಿದೆ. ಇದರಲ್ಲಿ ಓಂಕಾರದ ಮಹಿಮೆ, ಮನುಷ್ಯನ ಜಾಗ್ರತ್, ಸ್ವಪ್ನ, ಸುಷುಪ್ತಿ, ತುರೀಯ ಎಂಬ ನಾಲ್ಕು ಅವಸ್ಥೆಗಳ ವಿವರಣೆ ಇದೆ. ಸೂತ್ರ ಗ್ರಂಥದಂತಿದ್ದರೂ ಓಂಕಾರವೇ ಸಮಸ್ತ ವಿಶ್ವವೂ ಭೂತ ಭವಿಷ್ಯದ್ವರ್ತಮಾನಗಳೂ ಆಗಿದೆ ಎಂದು ವಿವರಿಸುವ ಈ ಉಪನಿಷತ್ತಿಗೆ ಗೌಡಪಾದರೂ ವಿಸ್ತಾರವಾದ ಕಾರಿಕೆಯನ್ನು ಬರೆದಿದ್ದಾರೆ. ಅದ್ವೈತ, ಪ್ರಪಂಚ ಎಂಬ ಪದಗಳು ಇದರಲ್ಲಿಯೇ ಮೊದಲು ಬಂದಿರುವುದು.

       🔔🔔ತೈತ್ತಿರೀಯೋಪನಿಷತ್ 🌷🥀

ಇದರ ಶಾಂತಿಮಂತ್ರ ‘ಶಂ ನೋ ಮಿತ್ರಃ ಶಂ ವರುಣಃ’ ಎಂಬುದು. ಕೃಷ್ಣ ಯಜುರ್ವೇದದ ಶಾಖೆಗೆ ಸೇರಿದ್ದು ಮೂರು ವಲ್ಲಿಗಳಿಂದ ಕೂಡಿದೆ. ಶಿಕ್ಷಾವಲ್ಲೀ (ಶಿಕ್ಷಾಧ್ಯಾಯ), ಬ್ರಹ್ಮಾನಂದವಲ್ಲೀ, ಭೃಗುವಲ್ಲೀ ಎಂದು ಮೊದಲ ಶಬ್ದಗಳಿಂದ ಹೆಸರುಗಳನ್ನು ಕೊಡಲಾಗಿದೆ. ಅನುವಾಕಗಳಾಗಿ ವಿಭಜಿಸಲ್ಪಟ್ಟು ಚಿಕ್ಕ ಚಿಕ್ಕ ಗದ್ಯವಾಕ್ಯಗಳಿಂದ ಕೂಡಿದೆ. ಶಿಕ್ಷಾಧ್ಯಾಯದಲ್ಲಿ ಅಧ್ಯಯನವನ್ನು ಮುಗಿಸಿರುವ ಶಿಷ್ಯನಿಗೆ ಮಾಡಿರುವ ಉಪದೇಶ ಎಲ್ಲ ದೇಶಕಾಲಗಳಿಗೂ ಅನ್ವಯಿಸುವಂತಿದ್ದು ಸಾರ್ವತ್ರಿಕ ಧರ್ಮನಿರೂಪಣೆಯಂತಿದೆ. ಬ್ರಹ್ಮಾನಂದವಲ್ಲಿಯಲ್ಲಿ ‘ಸತ್ಯಂ ಜ್ಞಾನಂ ಅನಂತಂ ಬ್ರಹ್ಮ’ ಎಂಬ ಬ್ರಹ್ಮವಸ್ತುಲಕ್ಷಣಗಳು, ಸೃಷ್ಟಿಕ್ರಮದ ವಿವೇಚನೆ ಇರುವುದಲ್ಲದೆ ವಾಙ್ಮನದರನಾದ ಬ್ರಹ್ಮವಸ್ತುವಿನಲ್ಲಿ ನೆಲೆನಿಂತವ ಭಯವಿದೂರನಾಗುವನೆಂಬ ಉಪದೇಶವಿದೆ. ಭೃಗುವಲ್ಲಿಯಲ್ಲಿ ಬ್ರಹ್ಮವಸ್ತು ಸೃಷ್ಟಿಸ್ಥಿತಿಲಯಗಳಿಗೆ ಕಾರಣವೆಂದೂ ಅದೇ ಆನಂದ ಸ್ವರೂಪಿ ಎಂದೂ ‘ಆನಂದೋ ಬ್ರಹ್ಮೇತಿ ವ್ಯಜಾನಾತ್’ ಎಂದೂ ತಿಳಿಸಲಾಗಿದೆ. ಪಂಚಕೋಶಗಳ ನಿರೂಪಣೆ ಸ್ಪಷ್ಟವಾಗಿದೆ. ಅವು ಒಂದರಿಂದ ಮತ್ತೊಂದು ಹುಟ್ಟುವುವೆಂಬ ಸಿದ್ಧಾಂತವಿದೆ. ಆಕಾಶ ಆತ್ಮನಿಂದ ಹುಟ್ಟಿತು ಎಂಬ ತತ್ತ್ವ ಸಾಂಖ್ಯದರ್ಶನದ ಬೆಳೆವಣಿಗೆಗೆ ಸಹಾಯಕವಾಯಿತು. ಇದರಲ್ಲಿ ಆಜಾನಜ, ಕರ್ಮಜ ಎಂದು ದೇವತೆಗಳನ್ನು ವಿಭಾಗಿಸಲಾಗಿದೆ. ಬ್ರಹ್ಮನೇ ದೇವತೆಗಳಿಗಿಂತ ಅಧಿಕನೆಂದು ಸಾರಿದೆ. ಬ್ರಹ್ಮಾನಂದವನ್ನು ಪಡೆದವ ಹಾಡುವ ಸಾಮವೊಂದು ಕೊನೆಯಲ್ಲಿ ಇದೆ.

      ☘️🌱ಐತರೇಯೋಪನಿಷತ್ 🌷

ಋಗ್ವೇದದ ಐತರೇಯ ಆರಣ್ಯಕಕ್ಕೆ ಸೇರಿದೆ. ‘ವಾಙ್ಮೇ ಮನಸಿ ಪ್ರತಿಷ್ಠಿತಾ’ ಎಂಬುದು ಇದರ ಶಾಂತಿಮಂತ್ರ. ಗಾತ್ರದಲ್ಲಿ ಬಹಳ ಚಿಕ್ಕದು. ಮೂರು ಅಧ್ಯಾಯಗಳಿವೆ. ಆತ್ಮನಿಂದ ಲೋಕಗಳೆಲ್ಲದರ ಸೃಷ್ಟಿಯಾಯಿತೆಂದು ಮೊದಲು ತಿಳಿಸಲಾಗಿದೆ. ಅನಂತರ ಅಶನಾ ಪಿಪಾಸೆಗಳ ವೃತ್ತಾಂತ. ಪುರುಷ ಲೋಕಗಳಿಗೂ ಲೋಕಪಾಲಕರಿಗೂ ಅನ್ನವನ್ನು ಸೃಜಿಸಲು ಮಾಡಿದ ಸಂಕಲ್ಪ, ಇಂದ್ರ ಶಬ್ದದ ಅರ್ಥ, ಪುರುಷನ ಮೂರು ಜನ್ಮಗಳು, ಮನೋವ್ಯಾಪಾರಗಳ ವಿಶ್ಲೇಷಣೆ-ಇವನ್ನು ನಿರೂಪಿಸಲಾಗಿದೆ. ಕೊನೆಯಲ್ಲಿ ‘ಪ್ರಜ್ಞಾನಂ ಬ್ರಹ್ಮ’ ಎಂಬ ಉಪದೇಶವಿದೆ.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...