Friday 29 May 2020

*ಬದರೀ ಕ್ಷೇತ್ರ ಮಹಾತ್ಮೆ-* ✨

🏔️ಬದರಿಯು ಭರತಖಂಡದ ಸರ್ವಶ್ರೇಷ್ಠ ಪುಣ್ಯಕ್ಷೇತ್ರ.

🏔️ಇದರ ವರ್ಣನೆಯು ಮಹಾಭಾರತ, ಹರಿವಂಶ, ಭಾಗವತ ಮೊದಲಾದ ಇತಿಹಾಸ ಪುರಾಣಗಳಲ್ಲಿ ವಿಫುಲವಾಗಿ ಬಂದಿದೆ.

🏔️ಭರತಖಂಡದ ಆಧ್ಯಾತ್ಮಿಕ ರಾಜಧಾನಿ ಎಂಬುದಾಗಿ ಭಾಗವತವು ವರ್ಣಿಸಿದೆ. ಆದ್ದರಿಂದಲೇ ಬದರಿ ಯಾತ್ರೆಗೆ ಭಾರತದ ಧಾರ್ಮಿಕ ಜನತೆಯಲ್ಲಿ ಅತ್ಯುನ್ನತ ಸ್ಥಾನ ಲಭಿಸಿದೆ.

🏔️ಬದರಿಯು ಅತ್ಯುನ್ನತ ಕ್ಷೇತ್ರವಾದುದರಿಂದಲೇ ಇದರ ಸ್ವಾಮಿಯಾದ ನಾರಾಯಣನೇ ಸರ್ವೋತ್ತಮ ದೇವತೆಯಾಗಿರುವನು ಎಂಬುದು ಸಿದ್ಧವಾಗುವುದು.

🏔️ಇಲ್ಲಿ ಹರಿಯುವ ಗಂಗಾ(ಅಲಕಾನಂದಾ) ನದಿಯು ಜಗತ್ತಿನ ಸರ್ವಶ್ರೇಷ್ಠ ನದಿಯಾಗಿದೆ.

🏔️ಇದು ಮೂಲತಃ ನಾರಾಯಣನ ಪಾದೋದಕ ಎಂಬುದೂ ಗಮನಾರ್ಹ.

🏔️ಪ್ರಾಚೀನ ಯುಗಗಳ ಧ್ರುವ, ಪೃಥು, ಪ್ರಿಯವ್ರತ ಮೊದಲಾದ ಸಕಲ ರಾಜರುಗಳೂ, ನಾರದಾದಿಮುನಿಗಳೂ, ಬ್ರಹ್ಮಾದಿದೇವತೆಗಳೂ ಬಹಳವಾಗಿ ಸೇವಿಸಿದ ಕ್ಷೇತ್ರ ಎಂಬುದು ಇದರ ಅಸಾಧಾರಣ ವೈಶಿಷ್ಟ್ಯ.

🏔️ಧರ್ಮಪುತ್ರತ್ವೇನ ಅವತರಿಸಿದ ಶ್ರೀಮನ್ನಾರಾಯಣನು ನರನೊಂದಿಗೆ ಲೋಕಶಿಕ್ಷಣಕ್ಕಾಗಿ ತಪಸ್ಸು ಮಾಡಿದ ಸ್ಥಳ.

🏔️ಇಂದ್ರಪ್ರೇಷಿತರಾದ ಕಾಮಾದಿಗಳು ಪರಾಜಿತರಾದ ಸ್ಥಳ.
ಉರ್ವಶಿಯು ಶ್ರೀಮನ್ನಾರಾಯಣನಿಂದ ಜನ್ಮ ತಳೆದ ಸ್ಥಳ.

🏔️ಶ್ರೀಕೃಷ್ಣರೂಪದಿಂದ ಶ್ರೀಹರಿಯು ಘಂಟಾಕರ್ಣರಿಗೆ ಮೋಕ್ಷವಿತ್ತ ಸ್ಥಳ.

🏔️ಪಾಂಡವರು ಅವತರಿಸಿದ ಸ್ಥಳ.
ಪಾಂಡವರು ಬಾಲ್ಯವನ್ನು ಕಳೆದದ್ದಲ್ಲದೇ ತಮ್ಮ ತೀರ್ಥಯಾತ್ರೆಯ ಕಾಲದಲ್ಲೂ ಮಹಾಪ್ರಸ್ಥಾನದ ಸಮಯದಲ್ಲೂ ಸಂದರ್ಶಿಸಿದ ಸ್ಥಳ.

🏔️ಶ್ರೀಮದಾಚಾರ್ಯರು ತಮ್ಮ ಪ್ರಥಮ ಬದರೀ ಸಂದರ್ಶನ ಸಮಯದಲ್ಲಿ ಗೀತಾಭಾಷ್ಯವನ್ನು ಸಮರ್ಪಿಸಿದ್ದು,  ಪಾಠ ಹೇಳಿದ್ದು, ೪೮ ದಿನಗಳ ಕಾಲ ಕಾಷ್ಠಮೌನವ್ರತವನ್ನು, ಉಪವಾಸವನ್ನು ಆಚರಿಸಿದ್ದು, ಶಿಷ್ಯರಿಗೆ ಸಂದೇಶವಿತ್ತು ತೆರಳಿದ್ದು, ಶ್ರೀವೇದವ್ಯಾಸದೇವರನ್ನು ಸಂದರ್ಶಿಸಿ ಉತ್ತರಬದರಿಯಿಂದ ಮರಳುತ್ತಲೇ ಬ್ರಹ್ಮಸೂತ್ರಭಾಷ್ಯವನ್ನು ರಚಿಸಿದ್ದು, ಶ್ರೀಸತ್ಯತೀರ್ಥರು ಬ್ರಹ್ಮಸೂತ್ರಭಾಷ್ಯದ ಪ್ರಥಮ ಪ್ರತಿಯನ್ನು ಲೇಖನ ಮಾಡಿದ್ದು ಈ ಪವಿತ್ರ ಸ್ಥಳದಲ್ಲಿ ಎಂದು ಮಧ್ವವಿಜಯವು ವರ್ಣಿಸುವುದು.

🏔️ಬದರಿಯಲ್ಲಿ ಪರಸ್ಪರ  ಎದುರಿನಲ್ಲಿ ನಾರಾಯಣಪರ್ವತ ಮತ್ತು ನರಪರ್ವತಗಳು ಇವೆ. ಬದರಿನಾರಾಯಣನ ಗುಡಿ ಇರುವ ಪರ್ವತವೇ ನಾರಾಯಣ ಪರ್ವತ.

🏔️ಎದುರಿನದು ನರಪರ್ವತ.

🏔️ನಾರಾಯಣಪರ್ವತದ ಬುಡದಲ್ಲೇ ಅಲಕಾನಂದಾ ನದಿಯು ಭೋರ್ಗರೆಯುತ್ತಾ ಹರಿಯುತ್ತದೆ. ಅದರ ತೀರದಲ್ಲೇ ಶ್ರೀಮನ್ನಾರಾಯಣ ದೇವರ ಧ್ಯಾನಮಗ್ನ ಮೂರ್ತಿ ಇದೆ‌.

🏔️ದೇವತಾಪರಿವಾರವೂ ಇದೆ.

🏔️ಅಲಕಾನಂದೆಯು ಇಲ್ಲಿ ಸ್ಪರ್ಶಿಸಲೂ ಅಸಾಧವೆನ್ನುವಷ್ಟು ತಂಪಾಗಿದೆ.

🏔️ಅದರ ತೀರದಲ್ಲೇ ತಪ್ತಕುಂಡ ಇರುವುದು ವಿಶೇಷ. ಆಳ, ವೇಗ, ಶೀತದಿಂದಾಗಿ ಅಲಕಾನಂದೆಯ ಸ್ನಾನ ಇಲ್ಲಿ ಸಾಮಾನ್ಯರಿಗೆ ಎಂದೂ ಸಾಧ್ಯವಾಗುವಂತದ್ದಲ್ಲ.

🏔️ದೇವಾಲಯದ ಒಳಾಂಗಣವೇ ಅನಂತಮಠ ಎಂದು ಪ್ರಸಿದ್ಧವಾದ ಸ್ಥಳವು.

🏔️ಶ್ರೀಮದಾಚಾರ್ಯರು ಇಲ್ಲಿಯೇ ತಂಗಿದ್ದು ಗೀತಾಭಾಷ್ಯವನ್ನು ರಚಿಸಿದರು.

🏔️ಬದರಿಯಿಂದ ಸುಮಾರು ಮೂರು ಕಿಮೀ ದೂರದಲ್ಲಿ ಸರಸ್ವತೀ ಮತ್ತು ಅಲಕಾನಂದಾ ನದಿಗಳ ಸಂಗಮಸ್ಥಳವಾದ ಕೇಶವಪ್ರಯಾಗ ಎಂಬ ಅಪೂರ್ವ ಸ್ಥಳ ಇದೆ.

🏔️ಅದರ ಬಳಿಯಲ್ಲೇ ಬೆಟ್ಟದಲ್ಲಿ ಗಣೇಶ ಗುಹಾ ಎಂಬ  ಸ್ಥಳವಿದ್ದು, ಅದು ಮಹಾಭಾರತವನ್ನು ಗಣೇಶನು ಬರೆದ ಸ್ಥಳ ಎನ್ನುವರು.

🏔️ಇಲ್ಲಿಂದ ಕೆಲವು ಅಡಿಗಳಷ್ಟು ಎತ್ತರದಲ್ಲಿ ವ್ಯಾಸಗುಹೆ ಇದೆ.

🏔️ಇದನ್ನು ವ್ಯಾಸಾಶ್ರಮ ಎನ್ನುವರು. ಅಲ್ಲಿಂದ ಮೇಲೆ ಸುಮಾರು ಹತ್ತು ಕಿಮೀಗಳಷ್ಟು ದೂರದಲ್ಲಿ ಮುಚುಕುಂದ ಮಲಗಿದ್ದ, ಕಾಲಯವನ ಭಸ್ಮವಾದ, ಮುಚುಕುಂದನಿಗೆ ಶ್ರೀಕೃಷ್ಣನ ದರ್ಶನವಾದ ಮುಚುಕುಂದಗುಹೆ ಇದೆ.

🏔️ಕೇಶವಪ್ರಯಾಗದಲ್ಲಿ ಅಲಕಾನಂದೆಯನ್ನು ಸೇರುವ ಸರಸ್ವತಿಯು ಒಂದು ಕಿಮೀ ಮೊದಲು ಪರ್ವತದಿಂದ ನೂರಾರು ಅಡಿಗಳಷ್ಟು ಕೆಳಕ್ಕೆ ಧುಮುಕುವ ರುದ್ರರಮಣೀಯ ದೃಶ್ಯ ಕಾಣಬಹುದು.

🏔️ಅದು ಧುಮುಕುವ ಸ್ಥಳದಲ್ಲೇ ಭೀಮಸೇನ ದೇವರು ಮಹಾಪ್ರಸ್ಥಾನಕಾಲದಲ್ಲಿ ಒಂದು ಪರ್ವತಶಿಖರವನ್ನು ಮುರಿದಿಟ್ಟು ಸೇತುವೆಯಾಗಿ ನಿರ್ಮಿಸಿದ ಭೀಮಸೇತು ಎಂಬ ಸೇತುವೆ ಇದೆ.

🏔️ಜಗತ್ತಿನ ಯಾವ ಪ್ರಸಿದ್ಧ ಜಲಪಾತಕ್ಕೂ ಇಂತಹಾ ಏಕಶಿಲೆಯ ಸೇತುವೆ ಇಲ್ಲ.

🏔️ಇದು ಭೀಮಸೇನ ದೇವರ ಅಗಾಧ ಬಲ ಮತ್ತು ಜ್ಞಾನಗಳಿಗೆ ಪ್ರತ್ಯಕ್ಷ ಸಾಕ್ಷಿ.

🏔️ಈ ಸರಸ್ವತೀ ನದಿಯ ತೀರದ ಸ್ಥಳವೇ ಭಾಗವತದಲ್ಲಿ ಉಲ್ಲೇಖಿಸಲ್ಪಟ್ಟಿರುವ ಶಮ್ಯಾಪ್ರಾಸ ಎಂಬ ಭಾಗವತ ರಚನೆಯ ಪುಣ್ಯಸ್ಥಳ.

🏔️ಬದರಿಗಿಂತ ೨೦ ಕಿಮೀ ಮುಂಚಿತವಾಗಿ ಪಾಂಡುಕೇಶ್ವರ ಎಂಬ ಸ್ಥಳವಿದೆ.

🏔️ಅಲಕಾನಂದಾ ತೀರದ ಈ ಸ್ಥಳದಲ್ಲಿಯೇ, ಪಾಂಡುರಾಜನು ತನಗೆ ಕಿಂದಮೃಷಿಗಳಿಂದ ಶಾಪ ಬಂದ ನಂತರದ ಕಾಲದಲ್ಲಿ ವಾಸಿಸಿದ್ದನು.
ಅಲಕಾನಂದಾ ಸ್ನಾನಘಟ್ಟದ ಬಳಿ ಬ್ರಹ್ಮಕಪಾಲ, ಗರುಡಶಿಲಾ, ನಾರದಶಿಲಾ ಮೊದಲಾದ ಸ್ಥಳಗಳಿವೆ. ಬ್ರಹ್ಮಕಪಾಲದಲ್ಲಿ ಸಮರ್ಪಿಸಲ್ಪಡುವ ಪಿಂಡದಿಂದ ಪಿತೃಗಳಿಗೆ ಸದ್ಗತಿಯು ಪ್ರಾಪ್ತವಾಗುವುದೆಂಬ ಕಾರಣದಿಂದಾಗಿ ಗಯಾಕ್ಷೇತ್ರದ ವಿಷ್ಣುಪಾದ ಶ್ರಾದ್ಧದಂತೆ ಇಲ್ಲಿಯ ಶ್ರಾದ್ಧಕ್ಕೂ ತುಂಬಾ ಮಹತ್ತ್ವವನ್ನು ಶಾಸ್ತ್ರಗಳು ವಿಧಿಸಿವೆ.

🏔️ಪ್ರಸಿದ್ಧವಾದ ಎರಡು ಬದರಿಗಳಲ್ಲಿ ವಿಶಾಲಬದರಿಯೇ ನಾರಾಯಣಾಶ್ರಮದ ಬದರಿಯಾಗಿದೆ. ಭಾಗವತಾದಿಗಳಲ್ಲಿ ಇದನ್ನು ವಿಶಾಲಬದರಿ ಎಂದೇ ಕರೆಯಲಾಗಿದೆ.

🏔️ಶ್ರೀವೇದವ್ಯಾಸದೇವರು ಸಾಕ್ಷಾತ್ತಾಗಿ ನೆಲೆಸಿರುವ ಉತ್ತರಬದರೀ ಎಂಬ ಇನ್ನೂ ಶ್ರೇಷ್ಠವಾದ ಮತ್ತೊಂದು ಬದರಿಯ ಪ್ರಸ್ತಾಪ ಮಹಾಭಾರತದಲ್ಲೂ ಮಹಾಭಾರತತಾತ್ಪರ್ಯನಿರ್ಣಯದಲ್ಲೂ  ಬಂದಿದೆ.

🏔️ ನರಾಗಮ್ಯವಾದ ಆ ಬದರಿಯನ್ನು ಶ್ರೀಮದಾಚಾರ್ಯರು ಎರಡು ಬಾರಿ ಸಂದರ್ಶಿಸಿ ಅಲ್ಲಿ ಶ್ರೀಮನ್ನಾರಾಯಣ ದೇವರಿಂದಲೂ ಅದರ ಸಮೀಪದ ನಾರಾಯಣಾಶ್ರಮದಲ್ಲಿ ಶ್ರೀವೇದವ್ಯಾಸರಿಂದಲೂ ವಿಶೇಷವಾಗಿ ಅನುಗ್ರಹೀತರಾದ ವಿವರವು ಮಧ್ವವಿಜಯದಲ್ಲಿ ಇದೆ.

🏔️ಅಲ್ಲದೇ ಅವರು ಅದ್ಯಾಪಿ ಈ ಬದರಿಯಲ್ಲಿ ನೆಲೆಸಿರುವರೆಂದೂ ದೇವಮಾನದ ನೂರು ವರ್ಷಗಳ ನಂತರ ತಮ್ಮ ಮೂಲರೂಪದೊಂದಿಗೆ ಐಕ್ಯ ಹೊಂದುವರೆಂದೂ ಶ್ರೀರಾಜರು ತಮ್ಮ ಸರಸಭಾರತೀವಿಲಾಸದಲ್ಲಿ ತಿಳಿಸಿರುವರು.

🏔️ಇಷ್ಟೆಲ್ಲಾ ಮಹತ್ತ್ವದ ಪುಣ್ಯಭೂಮಿಯಾದ ಈ ದೇವಭೂಮಿಯಲ್ಲಿ ಕಾಲಿಟ್ಟರೂ ಪುಣ್ಯವೆನ್ನುತ್ತಾರೆ ಬಲ್ಲವರು.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...