Thursday 2 May 2019

ಪುಳಿಯೋಗರೆಯ ಪ್ರಯಾಣ

ಹತ್ತನೇ ಶತಮಾನದಲ್ಲಿ ಶಿವಕೋಟ್ಯಾಚಾರ್ಯ ವಿರಚಿತ ಕನ್ನಡದ ಗದ್ಯ ಕೃತಿ...ಬೃಹತ್ ಆರಾಧನೆ.. "ವಡ್ಡಾರಾಧನೆ". ಆ ಕೃತಿಯಲ್ಲಿ ಬರುವ 'ಇಡ್ಡಲಿಗೆ' ಎನ್ನುವ ಖಾದ್ಯ ಈಗ ವಿಶ್ವದಾದ್ಯಂತ ಆರೋಗ್ಯಕರ ಉಪಹಾರ ಎನಿಸಿಕೊಳ್ಳುವ ಬಿರುದು ಪಡೆದು ಬೀಗುತ್ತಿರುವ 'ಇಡ್ಲಿ'.
ಇಂತಹುದೇ ಇತಿಹಾಸದ ಮಹತ್ವ ಪಡೆದಿರುವ ಇನ್ನೊಂದು ಖಾದ್ಯ, ಕರ್ನಾಟಕದಲ್ಲಿ, ಮೇಲುಕೋಟೆಯಲ್ಲಿ ಜನ್ಮತಾಳಿದ "ಪುಳಿಯೋಗರೆ". ಪುಳಿಯೋಗರೆಯ ಇತಿಹಾಸದ ಜೊತೆಗೇ ಧಾರ್ಮಿಕತೆಯೂ ಸಮ್ಮಿಳಿತವಾಗಿ ಇದೊಂದು ವಿಷೇಶ ಪ್ರಸಾದದ ರೂಪದಲ್ಲಿ ಹಲವಾರು ದೇವಸ್ಥಾನಗಳಲ್ಲಿ ಸ್ಥಾನ ಪಡೆದಿದೆ.

ಇಂದು ಶ್ರೀ ರಾಮಾನುಜಾಚಾರ್ಯರ 1001 ನೇ ಜನ್ಮೋತ್ಸವದಂದು ಪುಳಿಯೋಗರೆಯ ಮುಖಾಂತರವಾದರೂ ಅವರನ್ನು ಸ್ಮರಿಸಬೇಕು, ಏಕೆಂದರೆ ಪುಳಿಯೋಗರೆಯ ಜನ್ಮಸ್ಥಳ ಮೇಲುಕೋಟೆ, ಈ ಪ್ರಸಾದದ ಕತೃ
  ಶ್ರೀ ರಾಮಾನುಜಾಚಾರ್ಯರು..!

ದೂರ ದೂರದ ಹಳ್ಳಿಗಳಿಂದ ಬರುತ್ತಿದ್ದ ಎಲ್ಲಾ ಜಾತಿ, ಕುಲಗಳ ಭಕ್ತಾದಿಗಳು ಮೇಲುಕೋಟೆಯಲ್ಲಿ ಹಲವಾರು ದಿನಗಳವರೆಗೆ ತಂಗುತ್ತಿದ್ದರು. ಇವರ ಹಸಿವು ತಣಿಸಲು ಆರೋಗ್ಯಕರವಾದ ಮತ್ತು ರುಚಿಕರವಾದ ಖಾದ್ಯವೊಂದನ್ನು ಬೆಳಗಿನ ಮತ್ತು ಸಂಜೆಯ ಪೂಜೆಗೆ ನೈವೇದ್ಯವಾಗಿ ಅರ್ಪಿಸಿದ ಪ್ರಸಾದವನ್ನು ಭಕ್ತರಿಗೆ ಹಂಚಿದರೆ ದೇವರೂ ಮತ್ತು ಹೊಟ್ಟೆ ತುಂಬಿದ ಭಕ್ತರೂ ಸಂತೃಪ್ತರಾಗಿರುತ್ತಾರೆ ಎನ್ನುವ ಚಿಂತನೆ ರಾಮಾನುಜಾಚಾರ್ಯರದು.
ಸಮಸ್ಯೆಯೆಂದರೆ ಬೇಯಿಸಿದ ಅನ್ನ ಹಳಸದಂತೆ ಕಾಪಾಡಿಕೊಂಡಿರಬೇಕು. ಅದಕ್ಕೆ ರಾಮಾನುಜಾಚಾರ್ಯರೇ ಹುಡುಕಿದ ಪರಿಹಾರ,
ಹುಣಸೇಹಣ್ಣಿನ ರಸ ಮತ್ತು ಕಬ್ಬಿನ ಹಾಲು ಬೆರಸಿ ಸಣ್ಣ ಕುದಿ ತೆಗೆದು ಅದನ್ನು ಆರಿದ ಅನ್ನಕ್ಕೆ ಬೆರೆಸಿದರೆ ದಿನವಿಡೀ ಸೇವಿಸಲು ಯೋಗ್ಯವಾದ ಖಾದ್ಯ. ಇದನ್ನೇ ದೇವರ ಪ್ರಸಾದದ ರೂಪದಲ್ಲಿ ಕೊಡುತ್ತಿದ್ದರಿಂದ ಭಕ್ತರು ಅನ್ನಕ್ಕೆ ಅಸಡ್ಡೆ ತೋರದೆ, ಚೆಲ್ಲದೆ, ಬಿಸಾಡದೆ ಸ್ವೀಕರಿಸುತ್ತಿದ್ದರು.

ಭಕ್ತರ ಮೇಲಿನ ಅತೀವ ಕಳಕಳಿಯಿಂದ ಪ್ರಸಾದದ ಪ್ರತಿರೂಪವನ್ನೇ ಮಾರ್ಪಡಿಸಿದ, ಪುಳಿಯೋಗರೆಯನ್ನು ಕಲಸಿ ಅನ್ನಕ್ಕೆ ಹೊಸ ರೂಪ,ರುಚಿಯನ್ನು ಕೊಟ್ಟಹಾಗೆ, ಹಲವು ಸಿದ್ದಾಂತಗಳ ಸಾರಗಳನ್ನು ಬೆರೆಸಿ ಹಸನಾಗಿ, ಸಾಮಾನ್ಯರಿಗೆ ಅರ್ಥವಾಗುವಂತೆ "ವಿಶಿಷ್ಟಾದ್ವೈತ" ದ ಸೃಷ್ಟಿಕರ್ತನಿಗೆ ನಮೋ ನಮಃ.

💐💐💐💐💐

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...